ಒಂದು ದಿನ ನಗರದ ಜನನಿಬಿಡ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದಾಗ, ನನ್ನ ಗಮನವನ್ನು ಒಂದು ಫಲಕವು ಸೆಳೆಯಿತು. ಅದರಲ್ಲಿ “Second Innings House” ಎಂದು ಬರೆಯಲಾಗಿತ್ತು. ಕುತೂಹಲದಿಂದ ವಿಚಾರಿಸಿದಾಗ ಅದು ವೃದ್ಧಾಶ್ರಮ ಎಂದು ತಿಳಿಯಿತು. ಎಂತಹ ಅರ್ಥಪೂರ್ಣ ಮತ್ತು ಮನಸ್ಸಿಗೆ ಹತ್ತಿರವಾಗುವ ಹೆಸರು ಅಲ್ಲವೇ?
ನಾವು ಸಾಮಾನ್ಯವಾಗಿ ನಿವೃತ್ತಿ ಜೀವನವನ್ನು ಕಲ್ಪಿಸಿಕೊಳ್ಳುವಾಗ, ಇತರರ ಸಹಾಯವಿಲ್ಲದೆ ದೈನಂದಿನ ಕೆಲಸಗಳನ್ನೂ ಮಾಡಲಾಗದ ವಯಸ್ಸಾದ ವ್ಯಕ್ತಿಯ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಕಳೆದ ಹಲವು ವರ್ಷಗಳಲ್ಲಿ ನಾನು ಭೇಟಿಯಾದ ಅನೇಕ ನಿವೃತ್ತರು ಈ ಕಲ್ಪನೆಯನ್ನು ಸಂಪೂರ್ಣವಾಗಿ ತಪ್ಪು ಎಂದು ಸಾಬೀತುಪಡಿಸಿದ್ದಾರೆ.
ಕೆಲವರು ನಿವೃತ್ತಿಯ ನಂತರ ಉದ್ಯೋಗದಲ್ಲಿದ್ದಾಗಿನಿಂತಲೂ ಹೆಚ್ಚು ಉತ್ಸಾಹದಿಂದ ಬದುಕುತ್ತಿದ್ದಾರೆ. ಮತ್ತೊಂದೆಡೆ, ಸಾಕಷ್ಟು ಹಣವಿದ್ದರೂ, ಉತ್ತಮ ಆರೋಗ್ಯವಿದ್ದರೂ, ಜೀವನದಲ್ಲಿ ದಿಕ್ಕೇ ಕಾಣದವರನ್ನೂ ನಾನು ನೋಡಿದ್ದೇನೆ. ಒಂದು ದಿನದಲ್ಲಿ ಅವರ ದಿನಚರಿ ಸಂಪೂರ್ಣ ಬದಲಾಗಿದೆ. ಕೆಲಸದ ಮೂಲಕ ಸಿಗುತ್ತಿದ್ದ ಗುರುತಿನ ಭಾವನೆ ಮಾಯವಾಯಿತು. ದಿನಗಳು ಉದ್ದವಾಗುತ್ತಾ ಹೋದವು, ಮಾತುಕತೆಗಳು ಕಡಿಮೆಯಾದವು ಮತ್ತು ನಿಧಾನವಾಗಿ ಜೀವನದಲ್ಲಿ ಒಂದು ಶೂನ್ಯತೆ ಮನೆ ಮಾಡಿತು.
ಹೆಚ್ಚಿನವರು ನಿವೃತ್ತಿಯನ್ನು ಜೀವನದ ಅಂತಿಮ ಗುರಿಯಂತೆ ಚಿತ್ರಿಸುತ್ತಾರೆ. ಇನ್ನು ಮುಂದೆ ನಿಧಾನವಾಗಿ ಬದುಕಬೇಕು, ಕೆಲಸ ನಿಲ್ಲಿಸಬೇಕು ಮತ್ತು ವಿಶ್ರಾಂತಿ ಪಡೆಯಬೇಕು ಎಂದು ಹೇಳುತ್ತಾರೆ.
ಆದರೆ ನನ್ನ ಅಭಿಪ್ರಾಯ ಬೇರೆಯದೇ ಆಗಿದೆ.
ನಿವೃತ್ತಿ ಎಂದರೆ ಉತ್ಪಾದಕ ಜೀವನದ ಅಂತ್ಯವಲ್ಲ. ಅದು ನಿಜವಾದ ಸ್ವಾತಂತ್ರ್ಯದ ಆರಂಭ.
ಹಲವಾರು ದಶಕಗಳ ಕಾಲ ನಾವು ಗಡುವುಗಳು, ಜವಾಬ್ದಾರಿಗಳು, EMIಗಳು, ವೃತ್ತಿಜೀವನದ ಬೆಳವಣಿಗೆ, ಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಸ್ಥಿರತೆಯ ಹಿಂದೆ ಓಡುತ್ತೇವೆ. ಈ ಪ್ರಯಾಣದಲ್ಲಿ ನಮ್ಮ ಹವ್ಯಾಸಗಳು, ಆಸಕ್ತಿಗಳು, ಪ್ರತಿಭೆಗಳು ಮತ್ತು ಕೆಲವೊಮ್ಮೆ ನಮ್ಮ ಕನಸುಗಳನ್ನೇ ಮರೆತುಬಿಡುತ್ತೇವೆ.
ನಿವೃತ್ತಿ ಎಂದರೆ ಇವೆಲ್ಲವನ್ನೂ ಮತ್ತೆ ಕಂಡುಕೊಳ್ಳುವ ಅವಕಾಶ.
ನಿಸ್ಸಂಶಯವಾಗಿ, ಉತ್ತಮ ನಿವೃತ್ತಿ ನಿಧಿಯನ್ನು ನಿರ್ಮಿಸಿಕೊಳ್ಳುವುದು ಅತ್ಯಂತ ಮುಖ್ಯ. ಆರ್ಥಿಕ ಸ್ವಾತಂತ್ರ್ಯವು ಗೌರವ ಮತ್ತು ಮನಸ್ಸಿನ ನೆಮ್ಮದಿಯನ್ನು ನೀಡುತ್ತದೆ. ಆದರೆ ಹಣದ ಜೊತೆಗೆ ನಿವೃತ್ತಿಯ ಭಾವನಾತ್ಮಕ ಮತ್ತು ಮಾನಸಿಕ ಅಂಶಗಳೂ ಅಷ್ಟೇ ಮುಖ್ಯ. ದುರದೃಷ್ಟವಶಾತ್, ನಿವೃತ್ತಿ ಯೋಜನೆಯಲ್ಲಿ ಈ ವಿಷಯಗಳು ಹೆಚ್ಚಾಗಿ ಕಡೆಗಣಿಸಲ್ಪಡುತ್ತವೆ.
“ಜೀವನದ ಉದ್ದೇಶ” ಕಳೆದುಕೊಳ್ಳುವುದುನಿವೃತ್ತಿಯ ನಂತರ ಹೆಚ್ಚಿನವರು ಎದುರಿಸುವ ದೊಡ್ಡ ಸವಾಸವಾಲಾಗಿದೆ.
ನಿವೃತ್ತಿ ಜೀವನದಲ್ಲಿ ಇದರ ಜೊತೆಗೆ ಕುಟುಂಬದ ಜೀವನಶೈಲಿಯೂ ಬದಲಾಗುತ್ತದೆ. ದಿನದ ಬಹುಪಾಲು ಸಮಯ ಮನೆಯಲ್ಲೇ ಕಳೆಯುವುದರಿಂದ ಕುಟುಂಬದ ಸದಸ್ಯರೂ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳಿಂದ ಉಂಟಾಗುವ ಸಂಬಂಧಗಳ ಸವಾಲುಗಳ ಬಗ್ಗೆ ನಾವು ಯೋಚಿಸುವುದು ಮತ್ತು ಚರ್ಚಿಸುವುದು ಕಡಿಮೆ .
ಆದರೆ ಇಂದಿನ ನಿವೃತ್ತಿಯ ಚಿತ್ರಣ ಬದಲಾಗುತ್ತಿದೆ.
ಭಾರತದಾದ್ಯಂತ ಅನೇಕ ಹಿರಿಯ ನಾಗರಿಕರು ತಮ್ಮ ಅನುಭವ, ಕೌಶಲ್ಯ ಮತ್ತು ಆಸಕ್ತಿಗಳನ್ನು ಜೀವನದ ಎರಡನೇ ಇನ್ನಿಂಗ್ಸ್ ಆಗಿ ರೂಪಿಸಿಕೊಳ್ಳುತ್ತಿದ್ದಾರೆ. ಕೆಲವರು ಸಂಗೀತ ಕಲಿಸುತ್ತಿದ್ದಾರೆ. ಕೆಲವರು ಸಂಸ್ಥೆಗಳಿಗೆ ಸಲಹೆಗಾರರಾಗಿದ್ದಾರೆ. ಕೆಲವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇನ್ನೂ ಕೆಲವರು ಹೋಮ್ಸ್ಟೇ ನಡೆಸುತ್ತಿದ್ದಾರೆ. ಕೃಷಿ, ಬರವಣಿಗೆ, ಅಡುಗೆ, ಯೂಟ್ಯೂಬ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ Content Creation ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ.
ನಿವೃತ್ತಿಯ ನಂತರವೂ ಸಕ್ರಿಯವಾಗಿ ಜೀವನ ನಡೆಸುವವರಿಗೆ ಅದರ ಲಾಭ ಕೇವಲ ಹಣದ ಮಟ್ಟಿಗೆ ಸೀಮಿತವಾಗಿರುವುದಿಲ್ಲ.
- ಮನಸ್ಸು ಚುರುಕಾಗಿರುತ್ತದೆ.
- ಭಾವನಾತ್ಮಕ ಆರೋಗ್ಯ ಉತ್ತಮವಾಗಿರುತ್ತದೆ.
- ಒಂಟಿತನ ಕಡಿಮೆಯಾಗಿ ಸಾಮಾಜಿಕ ಸಂಪರ್ಕ ಹೆಚ್ಚುತ್ತದೆ.
- ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.
- ಜೀವನಕ್ಕೆ ಒಂದು ಕ್ರಮ ಮತ್ತು ಉದ್ದೇಶ ಸಿಗುತ್ತದೆ.
- ಮುಖ್ಯವಾಗಿ, ಸ್ವಾಭಿಮಾನ ಉಳಿದುಕೊಳ್ಳುತ್ತದೆ.
ಒಬ್ಬ ವ್ಯಕ್ತಿ ತುಂಬಾ ವರ್ಷಗಳ ಕಾಲ ಸಮಾಜಕ್ಕೆ, ಸಂಸ್ಥೆಗೆ ಅಥವಾ ಕುಟುಂಬಕ್ಕೆ ಅಗತ್ಯವಾದ ವ್ಯಕ್ತಿಯಾಗಿದ್ದು, ಒಂದೇ ದಿನದಲ್ಲಿ ಸಂಪೂರ್ಣ ನಿಷ್ಕ್ರಿಯನಾಗುವುದು ಮಾನಸಿಕವಾಗಿ ಸುಲಭವಲ್ಲ. ಅನೇಕ ನಿವೃತ್ತರು ತಮ್ಮನ್ನು ಯಾರಿಗೂ ಬೇಕಿಲ್ಲ ಎಂಬ ಭಾವನೆಯನ್ನು ಅನುಭವಿಸುತ್ತಾರೆ.
ಆದ್ದರಿಂದಲೇ ನಾನು ನನ್ನ ಗ್ರಾಹಕರಿಗೆ ಯಾವಾಗಲೂ ಹೇಳುವ ಮಾತು ಒಂದೇ.
ನಿವೃತ್ತಿ ಯೋಜನೆ ಎಂದರೆ ಕೇವಲ SIP, ಮ್ಯೂಚುವಲ್ ಫಂಡ್, ಪಿಂಚಣಿ ಅಥವಾ ಆಸ್ತಿ ಹಂಚಿಕೆ (Asset Allocation) ಮಾತ್ರವಲ್ಲ. ನಿವೃತ್ತಿಯ ನಂತರ ನೀವು ಯಾರಾಗ ಬಯಸುವಿರಿ ಎಂಬುದಕ್ಕೂ ಯೋಜನೆ ಇರಬೇಕು.
ಮುಂದಿನ ಬಾರಿ ನಿಮ್ಮ ನಿವೃತ್ತಿ ಬಗ್ಗೆ ಯೋಚಿಸುವಾಗ, ಹಣಕಾಸಿನ ಪ್ರಶ್ನೆಗಳ ಜೊತೆಗೆ ಈ ಪ್ರಶ್ನೆಗಳನ್ನೂ ನಿಮ್ಮನ್ನೇ ಕೇಳಿಕೊಳ್ಳಿ.
- ನನ್ನ ವೃತ್ತಿಯ ಹೊರತಾಗಿ ನನಗೆ ನಿಜವಾಗಿಯೂ ಸಂತೋಷ ಕೊಡುವುದು ಯಾವುದು?
- ಕಳೆದ 30–40 ವರ್ಷಗಳಲ್ಲಿ ನಾನು ಯಾವ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದೇನೆ?
- ಮುಂದಿನ ಪೀಳಿಗೆಗೆ ನಾನು ಯಾವ ಜ್ಞಾನವನ್ನು ಹಂಚಿಕೊಳ್ಳಬಹುದು?
- ಯಾವ ರೀತಿಯ ಜೀವನಶೈಲಿ ನನಗೆ ತೃಪ್ತಿಯನ್ನು ನೀಡುತ್ತದೆ?
- ನಾನು ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಹೇಗೆ ಸಕ್ರಿಯವಾಗಿರಬಹುದು?
ನಿಮ್ಮ ಅನುಭವವೇ ಒಂದು ಅಮೂಲ್ಯ ಆಸ್ತಿ. ನಿವೃತ್ತ ಬ್ಯಾಂಕರ್ಗೆ ಹಣಕಾಸಿನ ಶಿಸ್ತು ಗೊತ್ತಿರುತ್ತದೆ. ಒಬ್ಬ ಶಿಕ್ಷಕರ ಬಳಿ ದಶಕಗಳ ಜ್ಞಾನವಿರುತ್ತದೆ. ಒಬ್ಬ ಉದ್ಯಮಿಗೆ ಸಂಬಂಧಗಳನ್ನು ಬೆಳೆಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವಿರುತ್ತದೆ. ಒಬ್ಬ ಗೃಹಿಣಿಯ ಬಳಿ ಅಡುಗೆ, ನಿರ್ವಹಣೆ, ಆರೈಕೆ ಅಥವಾ ಸೃಜನಶೀಲತೆಯಂತಹ ಅಪಾರ ಕೌಶಲ್ಯಗಳಿರುತ್ತವೆ. ಇವು ಸಣ್ಣ ವಿಷಯಗಳಲ್ಲ.
ಇಂದಿನ ಜಗತ್ತಿನಲ್ಲಿ ಅನುಭವ ಮತ್ತು ನೈಜತೆ (Authenticity) ಹಿಂದೆಂದಿಗಿಂತಲೂ ಹೆಚ್ಚು ಮೌಲ್ಯ ಪಡೆದಿವೆ.
ನೀವು ನಿಮ್ಮ ಸಮಯವನ್ನು ನಿಮ್ಮ ಇಚ್ಛೆಯಂತೆ ಆಯ್ಕೆ ಮಾಡಬಹುದು. ಕಡಿಮೆ ಸಮಯ ಕೆಲಸ ಮಾಡಬಹುದು. ಒತ್ತಡಕ್ಕಿಂತ ಆಸಕ್ತಿಗೆ ಆದ್ಯತೆ ನೀಡಬಹುದು. ಅದರಿಂದ ಆದಾಯ ಬರಬಹುದು ಅಥವಾ ಬರದೇ ಇರಬಹುದು. ಏಕೆಂದರೆ ನಿವೃತ್ತಿಯ ನಂತರ ಸಕ್ರಿಯವಾಗಿರುವುದರ ಉದ್ದೇಶ ಕೇವಲ ಹೊಸ ಆದಾಯದ ಮೂಲವನ್ನು ಸೃಷ್ಟಿಸುವುದಲ್ಲ. ಪ್ರತಿದಿನವೂ ಅರ್ಥಪೂರ್ಣವಾಗಿರುವಂತೆ ಬದುಕುವುದೇ ಅದರ ನಿಜವಾದ ಉದ್ದೇಶ.
ಆದರೆ ಇಲ್ಲಿ ಒಂದು ಪ್ರಮುಖ ಎಚ್ಚರಿಕೆಯೂ ಇದೆ. ನಿವೃತ್ತಿ ಮತ್ತೊಂದು ಅಂತ್ಯವಿಲ್ಲದ ಹಣ ಗಳಿಸುವ ಸ್ಪರ್ಧೆಯಾಗಬಾರದು. ನಿವೃತ್ತಿ ಯೋಜನೆಯನ್ನು ಸರಿಯಾಗಿ ಮಾಡಿಕೊಂಡಿದ್ದರೆ, ನಿವೃತ್ತಿಯ ನಂತರ ವ್ಯಕ್ತಿ ಕೆಲಸ ಮಾಡುವುದಾದರೆ ಅದು ಅಗತ್ಯದಿಂದಲ್ಲ, ಆಸಕ್ತಿಯಿಂದ ಇರಬೇಕು.
ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ನಿವೃತ್ತ ವ್ಯಕ್ತಿ ಕೆಲಸ ಮಾಡುವುದಾದರೆ ಅದು ಅವನಿಗೆ ಸ್ವಾತಂತ್ರ್ಯ ನೀಡುತ್ತದೆ. ಆರ್ಥಿಕವಾಗಿ ಇತರರ ಮೇಲೆ ಅವಲಂಬಿತವಾಗಿರುವ ನಿವೃತ್ತ ವ್ಯಕ್ತಿಗೆ ಅದು ಒತ್ತಡವಾಗಬಹುದು. ಅದಕ್ಕಾಗಿಯೇ ಉದ್ಯೋಗದಲ್ಲಿರುವ ಅವಧಿಯಲ್ಲೇ ಶಿಸ್ತುಬದ್ಧ ಹೂಡಿಕೆ ಮಾಡುವುದು ಅತ್ಯಗತ್ಯ. ಸಾಕಷ್ಟು ಆರೋಗ್ಯ ವಿಮೆ, ತುರ್ತು ನಿಧಿ, ಸರಿಯಾದ ಆಸ್ತಿ ಹಂಚಿಕೆ ಮತ್ತು ದೀರ್ಘಾವಧಿಯ ಮ್ಯೂಚುವಲ್ ಫಂಡ್ ಹೂಡಿಕೆಗಳು ನಿವೃತ್ತಿಯ ಆತ್ಮವಿಶ್ವಾಸವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಹಣ ನಿಮಗೆ ಆಯ್ಕೆಗಳನ್ನು ನೀಡುತ್ತದೆ. ಜೀವನದ ಉದ್ದೇಶ ನಿಮಗೆ ಸಂತೋಷವನ್ನು ನೀಡುತ್ತದೆ. ಈ ಎರಡೂ ಒಂದಾಗಿರುವಾಗ ಮಾತ್ರ ನಿವೃತ್ತಿ ಜೀವನ ನಿಜವಾಗಿಯೂ ಅರ್ಥಪೂರ್ಣವಾಗುತ್ತದೆ.
ಒಂದು ಕಾಲದಲ್ಲಿ ನಿವೃತ್ತಿಯ ಅರ್ಥ, “ಕೆಲಸ ನಿಲ್ಲಿಸುವುದು” ಎಂದಾಗಿತ್ತು. ಇಂದು ಅದರ ಹೊಸ ಅರ್ಥ ಬಹುಶಃ “ನಿಮ್ಮನ್ನು ಆಯಾಸಗೊಳಿಸುವ ಕೆಲಸವನ್ನು ನಿಲ್ಲಿಸಿ, ನಿಮ್ಮ ಜೀವನಕ್ಕೆ ಅರ್ಥ ಮತ್ತು ಸಂತೋಷ ನೀಡುವ ಕೆಲಸವನ್ನು ಆರಂಭಿಸಿ” ಎಂದಿರಬಹುದು.
ಬಹುಶಃ ಜೀವನದ ನಿಜವಾದ “ಎರಡನೇ ಇನ್ನಿಂಗ್ಸ್” ಇದೇ ಆಗಿರಬಹುದು. ಬದುಕಲು ಸಾಕಾಗುವಷ್ಟು ಹಣವನ್ನು ಹೊಂದಿರುವುದು ಮಾತ್ರವಲ್ಲ, ಜೀವನವನ್ನು ಸಂಪೂರ್ಣವಾಗಿ ಆಸ್ವಾದಿಸಲು ಬೇಕಾದಷ್ಟು ಉತ್ಸಾಹ, ಕುತೂಹಲ ಮತ್ತು ಜೀವನದ ಉದ್ದೇಶವನ್ನು ಹೊಂದಿರುವುದೇ ನಿಜವಾದ ಯಶಸ್ವಿ ನಿವೃತ್ತಿ.

Shreedhara is the Founder & Director of Ara Financial Services Pvt. Ltd. He has an experience of over 2 decades in Financial Service Industry with majority of it in guiding individuals and institutions on their investments requirements.



