ಕಳೆದ ಐದು ವರ್ಷಗಳಲ್ಲಿ, ಜನರು Willನ ಬಗ್ಗೆ ಯೋಚಿಸುವ ರೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ನಾನು ಕಂಡಿದ್ದೇನೆ.
ಹಿಂದೆ, ಗ್ರಾಹಕರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ನಾನು ಬಹುತೇಕ ಊಹಿಸಬಹುದಾಗಿತ್ತು. ಕೆಲವರು ತಕ್ಷಣವೇ ವಿಷಯವನ್ನು ಬದಲಾಯಿಸುತ್ತಿದ್ದರು, ಇನ್ನೂ ಕೆಲವರು, “ಇದರ ಬಗ್ಗೆ ನಂತರ ಮಾತನಾಡೋಣ” ಎಂದು ವಿನಯದಿಂದ ಹೇಳುತ್ತಿದ್ದರು. ಹಲವರು Will ಎನ್ನುವುದು ವೃದ್ಧಾಪ್ಯದಲ್ಲಿ ಮಾಡುವ ವಿಷಯ ಎಂದು ಭಾವಿಸುತ್ತಿದ್ದರು. ಕೆಲವರಿಗೆ willನ ಬಗ್ಗೆ ಮಾತನಾಡುವುದೇ ಅಶುಭ ಅಥವಾ ದುರಾದೃಷ್ಟವನ್ನು ಆಹ್ವಾನಿಸುವಂತದ್ದು ಎಂಬ ನಂಬಿಕೆಯೂ ಇತ್ತು.
ಕೊರೊನಾ ಒಂದು ಮಹತ್ವದ ತಿರುವಾಗಿ ಪರಿಣಮಿಸಿದೆ. ಜೀವನ ಅನಿಶ್ಚಿತವಾದರೂ, ನಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಯೋಜಿಸುವುದು ನಮ್ಮ ಕೈಯಲ್ಲೇ ಇದೆ ಎಂಬುದನ್ನು ಅದು ನಮ್ಮಲ್ಲಿ ಅನೇಕರಿಗೆ ನೆನಪಿಸಿತು. ಮುಂಚಿತವಾಗಿ ಯೋಜಿಸುವುದು ನಮ್ಮ ಕುಟುಂಬಕ್ಕಾಗಿ ನಾವು ನೆರವೇರಿಸಬಹುದಾದ ಅತ್ಯಂತ ದೊಡ್ಡ ಜವಾಬ್ದಾರಿಗಳಲ್ಲಿ ಒಂದಾಗಿದೆ. ಮಹಾಮಾರಿಯ ನಂತರ ಈ ಸತ್ಯವನ್ನು ಅರಿತುಕೊಂಡ ಕಾರಣ, ಜನರು ಈಗ will ಮತ್ತು Estate Planningಬಗ್ಗೆ ಹೆಚ್ಚು ಮುಕ್ತವಾಗಿ ಚರ್ಚಿಸಲು ಆರಂಭಿಸಿದ್ದಾರೆ.
ನನ್ನ ಅಭಿಪ್ರಾಯದಲ್ಲಿ, ನಿಮ್ಮ ಆಸ್ತಿಯ ಪ್ರಮಾಣ ಎಷ್ಟೇ ಇರಲಿ, ಪ್ರತಿಯೊಂದು ಹಣಕಾಸು ಯೋಜನೆ (Financial Planning) ಕುರಿತ ಸಂಭಾಷಣೆಯ ಭಾಗವಾಗಿ Willನ ಬಗ್ಗೆ ಚರ್ಚೆಯಾಗಬೇಕು. ನೀವು ಮನೆ ಹೊಂದಿರಲಿ, ಹೂಡಿಕೆಗಳನ್ನು ಮಾಡಿರಲಿ, ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿರಲಿ ಅಥವಾ ಈಗಷ್ಟೇ ಸಂಪತ್ತನ್ನು ನಿರ್ಮಿಸಲು ಆರಂಭಿಸಿರಲಿ, Will ಎಲ್ಲರಿಗೂ ಪ್ರಸ್ತುತವಾಗಿದೆ.
ಆರಂಭಿಸುವ ಮೊದಲು, ಒಂದು ಸಾಮಾನ್ಯ ಗೊಂದಲವನ್ನು ನಿವಾರಿಸೋಣ
Will, Estate Planning, ಮತ್ತು Succession Planning ಎಂಬ ಪದಗಳನ್ನು ಅನೇಕ ಬಾರಿ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಅವೆಲ್ಲವೂ ಒಂದೇ ಅಲ್ಲ.
ಎಸ್ಟೇಟ್ ಪ್ಲಾನಿಂಗ್ (Estate Planning) ಎಂದರೆ, ನಿಮ್ಮ ಸಂಪತ್ತು, ಆಸ್ತಿಗಳು ಮತ್ತು ಹಣಕಾಸಿನ ವ್ಯವಹಾರಗಳನ್ನು ಹೇಗೆ ನಿರ್ವಹಿಸಬೇಕು ಹಾಗೂ ಅಂತಿಮವಾಗಿ ಯಾರಿಗೆ ಹೇಗೆ ವರ್ಗಾಯಿಸಬೇಕು ಎಂಬುದನ್ನು ನಿರ್ಧರಿಸುವ ವಿಶಾಲ ಪ್ರಕ್ರಿಯೆ.
ಉಯಿಲು (Will) ಎನ್ನುವುದು ಎಸ್ಟೇಟ್ ಪ್ಲಾನಿಂಗ್ನಲ್ಲಿನ ಅತ್ಯಂತ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ. ಇದು ನಿಮ್ಮ ಇಚ್ಛೆಗಳನ್ನು ದಾಖಲಿಸುತ್ತದೆ ಮತ್ತು ನಿಮ್ಮ ಸಂಪತ್ತು ನೀವು ಬಯಸಿದ ರೀತಿಯಲ್ಲಿಯೇ ವರ್ಗಾವಣೆಯಾಗುವಂತೆ ಮಾಡಲು ಸಹಾಯ ಮಾಡುತ್ತದೆ.
ಇನ್ನೊಂದೆಡೆ, ಸಕ್ಸೆಷನ್ ಪ್ಲಾನಿಂಗ್ (Succession Planning) ಸಾಮಾನ್ಯವಾಗಿ ಒಂದು ವ್ಯವಹಾರದ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಮುಂದಿನ ತಲೆಮಾರಿಗೆ ಅಥವಾ ನೀವು ಆಯ್ಕೆ ಮಾಡಿದ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದೆ.
ಬಹುತೇಕ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ, ಉಯಿಲನ್ನು ಬರೆಯುವುದು ಎಸ್ಟೇಟ್ ಪ್ಲಾನಿಂಗ್ನ ಮೊದಲ ಮತ್ತು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
ಉಯಿಲಿನ ಬಗ್ಗೆ ಇರುವ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳನ್ನು ದೂರ ಮಾಡೋಣ
ವರ್ಷಗಳ ಅನುಭವದಲ್ಲಿ, ಕೆಲವು ತಪ್ಪು ಕಲ್ಪನೆಗಳನ್ನು ನಾನು ಮತ್ತೆ ಮತ್ತೆ ಕೇಳಿದ್ದೇನೆ.
“ನಾನು ಉಯಿಲು ಬರೆಯಲು ಇನ್ನೂ ತುಂಬಾ ಚಿಕ್ಕವನು / ಚಿಕ್ಕವಳು.”
ಉಯಿಲು ವಯಸ್ಸಿನ ಬಗ್ಗೆ ಅಲ್ಲ. ಅದು ಜವಾಬ್ದಾರಿಯ ಬಗ್ಗೆ. ನೀವು ಸಂಪಾದನೆ ಮಾಡಲು ಆರಂಭಿಸಿದ್ದರೆ, ಹೂಡಿಕೆಗಳನ್ನು ಹೊಂದಿದ್ದರೆ, ಆಸ್ತಿಗಳನ್ನು ಹೊಂದಿದ್ದರೆ ಅಥವಾ ನಿಮ್ಮ ಮೇಲೆ ಅವಲಂಬಿತರಾಗಿರುವವರು ಇದ್ದರೆ, ನೀವು ಉಯಿಲು ಬರೆಯುವುದನ್ನು ಪರಿಗಣಿಸಬಹುದು.
“ನನ್ನ ಬಳಿ ಅಷ್ಟು ದೊಡ್ಡ ಸಂಪತ್ತೇ ಇಲ್ಲ.”
ಉಯಿಲು ಕೇವಲ ಶ್ರೀಮಂತ ಕುಟುಂಬಗಳಿಗಷ್ಟೇ ಇರುವುದಲ್ಲ. ನಿಮ್ಮ ಬಳಿ ಏನೇ ಇದ್ದರೂ, ಅದು ಉಳಿತಾಯ ಖಾತೆಯಾಗಿರಲಿ, ಮ್ಯೂಚುವಲ್ ಫಂಡ್ಗಳಾಗಿರಲಿ, ವಿಮಾ ಪಾಲಿಸಿಗಳಾಗಿರಲಿ ಅಥವಾ ಒಂದು ಮನೆಯಾಗಿರಲಿ, ಅದು ನೀವು ಬಯಸುವ ವ್ಯಕ್ತಿಗಳ ಕೈಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಉಯಿಲಿನ ಉದ್ದೇಶ.
“ನನ್ನ ಕುಟುಂಬದವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ.”
ಬಹುಶಃ ಅವರು ನೋಡಿಕೊಳ್ಳಬಹುದು. ಆದರೆ ಹೆಚ್ಚುವರಿ ಒತ್ತಡ, ದಾಖಲೆಗಳ ಕೆಲಸ, ವಿಳಂಬ ಮತ್ತು ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿಲ್ಲದೆ ಅಲ್ಲ. ಒಂದು ಸರಳ ಉಯಿಲು ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ಆ ಕಠಿಣ ಸಮಯದಲ್ಲಿ ನಿಮ್ಮ ಕುಟುಂಬವು ಅನಗತ್ಯ ಗೊಂದಲ, ದಾಖಲೆಗಳ ಕೆಲಸ ಮತ್ತು ಕಷ್ಟಕರ ನಿರ್ಧಾರಗಳಿಂದ ತಪ್ಪಿಸಿಕೊಳ್ಳಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.
ಉಯಿಲು (Will) ಎಂದರೇನು?
ಉಯಿಲು ಎನ್ನುವುದು ಒಂದು ಕಾನೂನುಬದ್ಧ ದಾಖಲೆಯಾಗಿದ್ದು, ನಿಮ್ಮ ಜೀವಿತಾವಧಿಯಲ್ಲಿ ನೀವು ಸಂಪಾದಿಸಿದ ಸಂಪತ್ತು ಮತ್ತು ಆಸ್ತಿಗಳನ್ನು ನೀವು ಕಾಳಜಿ ವಹಿಸುವ ವ್ಯಕ್ತಿಗಳಿಗೆ ಹೇಗೆ ವರ್ಗಾಯಿಸಬೇಕು ಎಂಬ ನಿಮ್ಮ ಇಚ್ಛೆಯನ್ನು ದಾಖಲಿಸುತ್ತದೆ.
ಇದರಲ್ಲಿ ಸ್ಪಷ್ಟವಾಗಿ ಈ ವಿಷಯಗಳನ್ನು ಉಲ್ಲೇಖಿಸಲಾಗುತ್ತದೆ:
- ನಿಮ್ಮ ಆಸ್ತಿಗಳನ್ನು ಯಾರು ಪಡೆಯಬೇಕು
- ನಿಮ್ಮ ಅಪ್ರಾಪ್ತ ಮಕ್ಕಳನ್ನು ಯಾರು ನೋಡಿಕೊಳ್ಳಬೇಕು
- ನಿಮ್ಮ ಇಚ್ಛೆಗಳನ್ನು ಜಾರಿಗೆ ತರುವ ಜವಾಬ್ದಾರಿ ಯಾರಿಗೆ ಇರಬೇಕು (ಇವರನ್ನು ಎಕ್ಸಿಕ್ಯೂಟರ್ (Executor) ಎಂದು ಕರೆಯಲಾಗುತ್ತದೆ)
ಉಯಿಲು ಇಲ್ಲದಿದ್ದರೆ, ನಿಮ್ಮ ಆಸ್ತಿಗಳ ಹಂಚಿಕೆಯನ್ನು ಅನ್ವಯವಾಗುವ ಉತ್ತರಾಧಿಕಾರ ಕಾನೂನುಗಳ ಪ್ರಕಾರ ಮಾಡಲಾಗುತ್ತದೆ. ಕಾನೂನು ಒಂದು ಚೌಕಟ್ಟನ್ನು ಒದಗಿಸಿದರೂ, ಅದರ ಫಲಿತಾಂಶವು ನೀವು ಬಯಸಿದಂತೆಯೇ ಇರಬೇಕು ಎಂಬುದು ಖಚಿತವಲ್ಲ.
ಇನ್ನೊಂದು ಪ್ರಮುಖ ವಿಷಯವೆಂದರೆ, ಉಯಿಲು ಶಾಶ್ವತವಾದ ದಾಖಲೆಯಲ್ಲ. ಜೀವನದ ವಿವಿಧ ಹಂತಗಳಲ್ಲಿ ನೀವು ಅನೇಕ ಬದಲಾವಣೆಗಳನ್ನು ಅನುಭವಿಸುತ್ತೀರಿ. ನೀವು ಮದುವೆಯಾಗುತ್ತೀರಿ, ಮಕ್ಕಳನ್ನು ಬರಮಾಡಿಕೊಳ್ಳುತ್ತೀರಿ, ಮನೆ ಖರೀದಿಸುತ್ತೀರಿ, ವ್ಯವಹಾರ ಆರಂಭಿಸುತ್ತೀರಿ, ಹೊಸ ಹೂಡಿಕೆಗಳನ್ನು ಮಾಡುತ್ತೀರಿ ಮತ್ತು ನಿಮ್ಮ ಹಣಕಾಸಿನ ಪರಿಸ್ಥಿತಿಯೂ ಬದಲಾಗುತ್ತದೆ.
ಈ ಬದಲಾವಣೆಗಳಿಗೆ ಅನುಗುಣವಾಗಿ ನಿಮ್ಮ ಉಯಿಲೂ ಬದಲಾಗಬೇಕು. ಅಗತ್ಯವಿದ್ದಾಗ ಅದನ್ನು ಪರಿಷ್ಕರಿಸಬಹುದು. ಪರಿಸ್ಥಿತಿಯಲ್ಲಿ ಮಹತ್ವದ ಬದಲಾವಣೆಗಳಾದರೆ, ನೀವು ಹೊಸ ಉಯಿಲನ್ನೂ ಬರೆಯಬಹುದು.
ಉಯಿಲು (Will) ಏಕೆ ಮುಖ್ಯ?
ನಮ್ಮಲ್ಲಿ ಹೆಚ್ಚಿನವರು ನಮ್ಮ ಕುಟುಂಬದವರಿಗೆ ನಮ್ಮ ಇಚ್ಛೆಗಳು ಚೆನ್ನಾಗಿ ತಿಳಿದಿವೆ ಎಂದು ನಂಬುತ್ತೇವೆ. ಅನೇಕ ಸಂದರ್ಭಗಳಲ್ಲಿ ಅದು ನಿಜವೂ ಆಗಿರಬಹುದು. ಆದರೆ ಸಮಸ್ಯೆ ನಮ್ಮ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಇರುವುದಿಲ್ಲ. ಯಾವುದನ್ನೂ ಸ್ಪಷ್ಟವಾಗಿ ದಾಖಲಿಸದಿದ್ದಾಗ, ಕಾನೂನು ಪ್ರಕ್ರಿಯೆಗಳು, ದಾಖಲೆಗಳ ಕೆಲಸ ಮತ್ತು ಯಾವ ಆಸ್ತಿ ಯಾರಿಗೆ ಸೇರಬೇಕು ಎಂಬ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲಿ ಎದುರಾಗುತ್ತದೆ.
ಒಂದು ಉಯಿಲು ಈ ಅನಿಶ್ಚಿತತೆಯನ್ನು ದೂರ ಮಾಡುತ್ತದೆ ಮತ್ತು ಭಾವನಾತ್ಮಕವಾಗಿ ಕಠಿಣವಾದ ಸಮಯದಲ್ಲಿ ನಿಮ್ಮ ಕುಟುಂಬವು ಚಿಂತಿಸಬೇಕಾದ ಒಂದು ದೊಡ್ಡ ವಿಷಯವನ್ನು ಕಡಿಮೆ ಮಾಡುತ್ತದೆ.
ಇದು ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುತ್ತದೆ
ಪ್ರೀತಿಪಾತ್ರರನ್ನು ಕಳೆದುಕೊಂಡ ನಂತರ ಹಣವು ಭಾವನಾತ್ಮಕ ವಿಷಯವಾಗಬಹುದು. ಸ್ಪಷ್ಟವಾಗಿ ಬರೆಯಲ್ಪಟ್ಟ ಉಯಿಲು ಗೊಂದಲವನ್ನು ಕಡಿಮೆ ಮಾಡುತ್ತದೆ ಮತ್ತು ಕುಟುಂಬದ ಸದಸ್ಯರ ನಡುವೆ ಉಂಟಾಗಬಹುದಾದ ಭಿನ್ನಾಭಿಪ್ರಾಯಗಳ ಸಾಧ್ಯತೆಯನ್ನು ತಗ್ಗಿಸುತ್ತದೆ.
ಇದು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸುತ್ತದೆ
ನಿಮ್ಮ ಸಂಗಾತಿ, ಮಕ್ಕಳು, ಪೋಷಕರು ಅಥವಾ ಇತರರು ನಿಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದರೆ, ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಉಯಿಲು ನಿಮಗೆ ನೀಡುತ್ತದೆ ಮತ್ತು ನಿಮ್ಮ ಇಚ್ಛೆಗಳು ಸ್ಪಷ್ಟವಾಗಿ ದಾಖಲಿಸಲ್ಪಟ್ಟಿರುವುದನ್ನು ಖಚಿತಪಡಿಸುತ್ತದೆ.
ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ
ಉಯಿಲು ಇಲ್ಲದಿದ್ದರೆ, ಕೆಲವು ಆಸ್ತಿಗಳನ್ನು ವರ್ಗಾಯಿಸುವ ಮೊದಲು ನಿಮ್ಮ ಕುಟುಂಬವು ದೀರ್ಘವಾದ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗಬಹುದು ಮತ್ತು ಹಲವಾರು ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕಾಗಬಹುದು.
ನಿಮ್ಮ ಕುಟುಂಬವು ಎಲ್ಲವನ್ನೂ ತಾವೇ ಅರ್ಥಮಾಡಿಕೊಂಡು ನಿರ್ಧರಿಸಬೇಕಾದ ಪರಿಸ್ಥಿತಿ ಬರದಂತೆ, ಆ ನಿರ್ಧಾರಗಳನ್ನು ನೀವೇ ಮುಂಚಿತವಾಗಿ ತೆಗೆದುಕೊಳ್ಳುತ್ತೀರಿ. ಈ ಸ್ಪಷ್ಟತೆ ಅವರಿಗೆ ಸಾಕಷ್ಟು ಸಮಯ, ಶ್ರಮ ಮತ್ತು ಅನಿಶ್ಚಿತತೆಯನ್ನು ಉಳಿಸಿಕೊಡುತ್ತದೆ.
ನಿಮ್ಮ ಉಯಿಲಿನಲ್ಲಿ ಏನೆಲ್ಲ ಇರಬೇಕು?
ಒಳ್ಳೆಯ ಉಯಿಲು ನಿಮ್ಮ ಕುಟುಂಬವು ನಿಮ್ಮ ಇಚ್ಛೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಷ್ಟು ಸ್ಪಷ್ಟವಾಗಿರಬೇಕು.
ನಿಮ್ಮ ಆಸ್ತಿಗಳ ಪಟ್ಟಿ
ನಿಮ್ಮ ಎಲ್ಲಾ ಆಸ್ತಿಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ. ಉದಾಹರಣೆಗೆ:
- ಬ್ಯಾಂಕ್ ಖಾತೆಗಳು
- ಮ್ಯೂಚುವಲ್ ಫಂಡ್ಗಳು
- ಷೇರುಗಳು ಮತ್ತು ಇತರ ಹೂಡಿಕೆಗಳು
- ವಿಮಾ ಪಾಲಿಸಿಗಳು
- ಸ್ಥಿರಾಸ್ತಿಗಳು
- ಚಿನ್ನ ಮತ್ತು ಆಭರಣಗಳು
- ಲಾಕರ್ಗಳು
- ವ್ಯವಹಾರದಲ್ಲಿನ ನಿಮ್ಮ ಪಾಲು
- ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಗುಡ್ವಿಲ್ (Goodwill)
- ಅನ್ವಯಿಸಿದರೆ, ಪೇಟೆಂಟ್ಗಳು, ಕಾಪಿರೈಟ್ಗಳು, ಟ್ರೇಡ್ಮಾರ್ಕ್ಗಳು ಅಥವಾ ರಾಯಲ್ಟಿಗಳಂತಹ ಬೌದ್ಧಿಕ ಆಸ್ತಿಗಳು
- ಡಿಜಿಟಲ್ ಹೂಡಿಕೆಗಳು ಮತ್ತು ಆನ್ಲೈನ್ ಹಣಕಾಸು ಖಾತೆಗಳು
Nominee ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳು (Legal Heirs)
ಹಣಕಾಸು ಯೋಜನೆಯಲ್ಲಿ ಇರುವ ಅತಿದೊಡ್ಡ ತಪ್ಪು ಕಲ್ಪನೆಗಳಲ್ಲಿ ಇದೂ ಒಂದು.
ಹಲವರು, ಒಮ್ಮೆ Nomineeಯನ್ನು ಸೇರಿಸಿದರೆ ತಮ್ಮ ಕೆಲಸ ಮುಗಿಯಿತು ಎಂದು ಭಾವಿಸುತ್ತಾರೆ.
ಆದರೆ ವಾಸ್ತವದಲ್ಲಿ, ನಾಮಿನಿಯ ಜವಾಬ್ದಾರಿ ಸಾಮಾನ್ಯವಾಗಿ ಆಸ್ತಿಯನ್ನು ಕಾನೂನುಬದ್ಧ ಉತ್ತರಾಧಿಕಾರಿಗಳ ಪರವಾಗಿ ಸ್ವೀಕರಿಸುವುದು ಅಥವಾ ತಾತ್ಕಾಲಿಕವಾಗಿ ಹೊಂದಿರುವುದು. ನಾಮಿನಿಯೇ ಅಂತಿಮವಾಗಿ ಆ ಆಸ್ತಿಯ ವಾರಸುದಾರನಾಗಿರಬೇಕು ಎನ್ನುವ ನಿಯಮವಿಲ್ಲ.
ಕೊನೆಯಲ್ಲಿ ಆ ಆಸ್ತಿಯನ್ನು ಯಾರು ಪಡೆಯಬೇಕು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಉಯಿಲೇ.
ಜಂಟಿಯಾಗಿ ಹೊಂದಿರುವ ಆಸ್ತಿಗಳು
ನೀವು ಸ್ಥಿರ ಆಸ್ತಿಗಳು, ಬ್ಯಾಂಕ್ ಖಾತೆಗಳು ಅಥವಾ ಹೂಡಿಕೆಗಳನ್ನು ಜಂಟಿಯಾಗಿ ಹೊಂದಿದ್ದರೆ, ನಿಮ್ಮ ಉಯಿಲು ಆ ಮಾಲೀಕತ್ವದ ರಚನೆ ಮತ್ತು ನೀವು ಬಯಸುವ ಹಂಚಿಕೆಯೊಂದಿಗೆ ಹೊಂದಿಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
ಡಿಜಿಟಲ್ ಆಸ್ತಿಗಳು
ಇಂದು ನಮ್ಮಲ್ಲಿ ಅನೇಕರು ಆನ್ಲೈನ್ ಹೂಡಿಕೆ ಖಾತೆಗಳು, ಡಿಜಿಟಲ್ ವಾಲೆಟ್ಗಳು, ಕ್ಲೌಡ್ ಸ್ಟೋರೇಜ್, ಸಾಮಾಜಿಕ ಜಾಲತಾಣಗಳ ಖಾತೆಗಳು ಮತ್ತು ಇತರ ಡಿಜಿಟಲ್ ಆಸ್ತಿಗಳನ್ನು ಹೊಂದಿದ್ದೇವೆ. ನಿಮ್ಮ ಉಯಿಲನ್ನು ಸಿದ್ಧಪಡಿಸುವಾಗ ಇವುಗಳನ್ನೂ ಪರಿಗಣಿಸಬೇಕು.
ಉಯಿಲು (Will) ಅನ್ನು ಹೇಗೆ ಬರೆಯಬಹುದು?
ಉಯಿಲು ಬರೆಯುವುದು ತುಂಬಾ ಸಂಕೀರ್ಣವಾದ ಕೆಲಸ ಎಂದು ಭಾವಿಸಿ ಅನೇಕರು ಅದನ್ನು ಮುಂದೂಡುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ, ಒಂದು ಮೂಲಭೂತ ಉಯಿಲನ್ನು ಸಿದ್ಧಪಡಿಸುವುದು ಅವರು ಅಂದುಕೊಳ್ಳುವುದಕ್ಕಿಂತ ಬಹಳ ಸರಳವಾಗಿದೆ.
ಇವು ಅದರ ಪ್ರಮುಖ ಹಂತಗಳು:
- ನಿಮ್ಮ ಎಲ್ಲಾ ಆಸ್ತಿಗಳ ಸ್ಪಷ್ಟವಾದ ಪಟ್ಟಿಯನ್ನು ಸಿದ್ಧಪಡಿಸಿ.
- ಯಾವ ಆಸ್ತಿಯನ್ನು ಯಾರು ಪಡೆಯಬೇಕು ಎಂಬುದನ್ನು ನಿರ್ಧರಿಸಿ.
- ನಿಮ್ಮ ಇಚ್ಛೆಗಳನ್ನು ಜಾರಿಗೆ ತರುವ ಒಬ್ಬ ಎಕ್ಸಿಕ್ಯೂಟರ್ (Executor) ಅನ್ನು ನೇಮಿಸಿ.
- ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಉಯಿಲಿಗೆ ಸಹಿ ಮಾಡಿ.
- ಉಯಿಲನ್ನು ಸುರಕ್ಷಿತವಾಗಿ ಸಂಗ್ರಹಿಸಿ ಮತ್ತು ಅದು ಎಲ್ಲಿದೆ ಎಂಬುದನ್ನು ನಿಮ್ಮ ವಿಶ್ವಾಸಾರ್ಹ ಕುಟುಂಬದ ಸದಸ್ಯರಿಗೆ ಅಥವಾ ಎಕ್ಸಿಕ್ಯೂಟರ್ಗೆ ತಿಳಿಸಿ.
ಸರಳವಾದ ಉಯಿಲನ್ನು ಅನೇಕ ಸಂದರ್ಭಗಳಲ್ಲಿ ಕಾನೂನು ಸಲಹೆಯಿಲ್ಲದೆ ಸಿದ್ಧಪಡಿಸಬಹುದು. ಆದರೆ ನಿಮ್ಮ ಕುಟುಂಬದ ರಚನೆ ಅಥವಾ ಹಣಕಾಸಿನ ಪರಿಸ್ಥಿತಿ ಹೆಚ್ಚು ಸಂಕೀರ್ಣವಾಗಿದ್ದರೆ, ತಜ್ಞರ ಮಾರ್ಗದರ್ಶನ ಪಡೆಯುವುದು ಸೂಕ್ತ.
ನಿಮ್ಮ ಉಯಿಲನ್ನು ಯಾವಾಗ ಪರಿಶೀಲಿಸಬೇಕು?
ಉಯಿಲು ಎನ್ನುವುದು ಒಮ್ಮೆ ಬರೆದು ಮರೆತುಬಿಡುವ ದಾಖಲೆಯಲ್ಲ. ಜೀವನದಲ್ಲಿ ಬದಲಾವಣೆಗಳಾದಂತೆ, ನಿಮ್ಮ ಉಯಿಲೂ ಬದಲಾಗಬೇಕು. ಈ ಕೆಳಗಿನಂತಹ ಮಹತ್ವದ ಜೀವನದ ಘಟನೆಗಳು ಸಂಭವಿಸಿದಾಗ ಉಯಿಲನ್ನು ಪರಿಶೀಲಿಸಿ:
- ಮದುವೆ ಅಥವಾ ವಿಚ್ಛೇದನ
- ಮಕ್ಕಳ ಜನನ
- ಪ್ರಮುಖ ಆಸ್ತಿಗಳ ಖರೀದಿ ಅಥವಾ ಮಾರಾಟ
- ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಬದಲಾವಣೆ
- ನಿಮ್ಮ ಕುಟುಂಬದ ಪರಿಸ್ಥಿತಿಯಲ್ಲಿ ಯಾವುದೇ ಮಹತ್ವದ ಬದಲಾವಣೆ
ಈ ಘಟನೆಗಳಲ್ಲಿ ಯಾವುದೂ ಸಂಭವಿಸದಿದ್ದರೂ, ಕೆಲವು ವರ್ಷಗಳಿಗೊಮ್ಮೆ ನಿಮ್ಮ ಉಯಿಲನ್ನು ಪರಿಶೀಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು.
ನೀವು ಉಯಿಲು ಬರೆಯದಿದ್ದರೆ ಏನಾಗುತ್ತದೆ?
ಯಾರಾದರೂ ಉಯಿಲು ಬರೆಯದೆ ಆಸ್ತಿಯನ್ನು ಬಿಟ್ಟುಹೋದರೆ, ಆ ಆಸ್ತಿಗಳನ್ನು ಹೇಗೆ ಹಂಚಬೇಕು ಎಂಬುದನ್ನು ಕಾನೂನು ನಿರ್ಧರಿಸುತ್ತದೆ. ಕಾನೂನು ಒಂದು ಚೌಕಟ್ಟನ್ನು ಒದಗಿಸಿದರೂ, ಅದರ ಫಲಿತಾಂಶವು ಆ ವ್ಯಕ್ತಿ ಬಯಸಿದ್ದಂತೆಯೇ ಇರಬೇಕು ಎಂಬುದು ಖಚಿತವಲ್ಲ. ಇದರಿಂದ ಕೆಲವೊಮ್ಮೆ ಈ ಕೆಳಗಿನ ಪರಿಸ್ಥಿತಿಗಳು ಉಂಟಾಗಬಹುದು:
- ಹೆಚ್ಚು ಸಮಯ ತೆಗೆದುಕೊಳ್ಳುವ ಕಾನೂನು ಪ್ರಕ್ರಿಯೆಗಳು
- ಹೆಚ್ಚುವರಿ ದಾಖಲೆಗಳ ಕೆಲಸ ಮತ್ತು ವಿವಿಧ ಸರ್ಕಾರಿ ಅಧಿಕಾರಿಗಳ ಕಚೇರಿಗಳಿಗೆ ಭೇಟಿ
- ಆಸ್ತಿಗಳ ವರ್ಗಾವಣೆಯಲ್ಲಿ ವಿಳಂಬ
- ಕುಟುಂಬದ ಸದಸ್ಯರ ನಡುವೆ ಗೊಂದಲ
- ನೀವು ಬಯಸಿದ ರೀತಿಗಿಂತ ಭಿನ್ನವಾಗಿ ಆಸ್ತಿಗಳ ಹಂಚಿಕೆ
ಉಯಿಲು ಇದ್ದರೆ, ಈ ಎಲ್ಲ ನಿರ್ಧಾರಗಳನ್ನು ಕಾನೂನಿನ ಪ್ರಕ್ರಿಯೆಗೆ ಸಂಪೂರ್ಣವಾಗಿ ಬಿಡುವ ಬದಲು, ನೀವೇ ಮುಂಚಿತವಾಗಿ ತೆಗೆದುಕೊಳ್ಳುವ ಅವಕಾಶ ನಿಮಗೆ ದೊರೆಯುತ್ತದೆ.
ಒಂದು ಕೊನೆಯ ಚಿಂತನೆ
ಹಣಕಾಸಿನ ಭದ್ರತೆಯನ್ನು ನಿರ್ಮಿಸುವುದು ಹಲವು ದಶಕಗಳ ಪ್ರಯಾಣ.
ನಾವು ಕಷ್ಟಪಟ್ಟು ದುಡಿಯುತ್ತೇವೆ, ನಿಯಮಿತವಾಗಿ ಉಳಿತಾಯ ಮಾಡುತ್ತೇವೆ, ತಾಳ್ಮೆಯಿಂದ ಹೂಡಿಕೆ ಮಾಡುತ್ತೇವೆ, ಮನೆ ಖರೀದಿಸುತ್ತೇವೆ, ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇವೆ, ಕುಟುಂಬವನ್ನು ಬೆಂಬಲಿಸುತ್ತೇವೆ ಮತ್ತು ವರ್ಷಗಳ ಪರಿಶ್ರಮದಿಂದ ಸಂಪತ್ತನ್ನು ನಿರ್ಮಿಸುತ್ತೇವೆ.
ಈ ಪ್ರಯಾಣದ ಬಗ್ಗೆ ಕ್ಷಣಕಾಲ ಯೋಚಿಸಿದರೆ, ಒಂದು ಆಸಕ್ತಿದಾಯಕ ಸಂಗತಿ ನಮಗೆ ತಿಳಿಯುತ್ತದೆ. ನಮ್ಮಲ್ಲಿ ಅನೇಕರಿಗೆ, ನಾವು ನಿರ್ಮಿಸುವ ಸಂಪತ್ತಿನ ದೊಡ್ಡ ಭಾಗವು ನಮ್ಮ ಜೀವಿತಾವಧಿಯಲ್ಲೇ ಸಂಪೂರ್ಣವಾಗಿ ಬಳಸಲ್ಪಡುವುದಿಲ್ಲ. ಅದು ಹೂಡಿಕೆಗಳು, ಸ್ಥಿರಾಸ್ತಿಗಳು, ಉಳಿತಾಯ, ವ್ಯವಹಾರಗಳು, ಆಭರಣಗಳು ಮತ್ತು ಇತರ ಆಸ್ತಿಗಳ ರೂಪದಲ್ಲಿ ನಮ್ಮೊಂದಿಗೇ ಉಳಿಯುತ್ತದೆ.
ಹಣದ ಮೌಲ್ಯವನ್ನು ಮೀರಿ, ಈ ಸಂಪತ್ತು ನಮಗೆ ಇನ್ನೂ ಆಳವಾದ ಒಂದು ಭಾವನೆಯನ್ನು ನೀಡುತ್ತದೆ. ಅದು ನಮಗೆ ಭದ್ರತೆಯ ಭಾವನೆ, ಆತ್ಮವಿಶ್ವಾಸ ಮತ್ತು ಮನಸ್ಸಿನ ನೆಮ್ಮದಿಯನ್ನು ನೀಡುತ್ತದೆ. ಇದು ಹಲವು ವರ್ಷಗಳ ಕಠಿಣ ಪರಿಶ್ರಮ, ಶಿಸ್ತು, ತ್ಯಾಗ ಮತ್ತು ವಿವೇಕಯುತ ಹಣಕಾಸಿನ ನಿರ್ಧಾರಗಳ ನೆನಪನ್ನು ತರುತ್ತದೆ. ಆ ಭಾವನೆಯನ್ನು ಅಳೆಯುವುದು ಕಷ್ಟ, ಅದನ್ನು ಬದಲಾಯಿಸುವುದು ಇನ್ನೂ ಕಷ್ಟ.
ಆದರೆ ಒಂದು ದಿನ, ಈ ಸಂಪತ್ತು ಸಹಜವಾಗಿಯೇ ಮುಂದಿನ ತಲೆಮಾರಿಗೆ ಅಥವಾ ನಾವು ಅತ್ಯಂತ ಪ್ರೀತಿಸುವವರಿಗೆ ವರ್ಗಾವಣೆಯಾಗುತ್ತದೆ. ಆ ವರ್ಗಾವಣೆ ಹೇಗೆ ನಡೆಯಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಉಯಿಲು ನಮಗೆ ನೀಡುತ್ತದೆ.
ನನ್ನ ದೃಷ್ಟಿಯಲ್ಲಿ, ಉಯಿಲು ಬರೆಯುವುದು ಜೀವನದ ಅಂತ್ಯಕ್ಕೆ ಸಿದ್ಧರಾಗುವುದಕ್ಕಾಗಿ ಮಾತ್ರವಲ್ಲ. ನಾವು ವರ್ಷಗಳ ಕಾಲ ಕಟ್ಟಿದ ಪ್ರತಿಯೊಂದು ಸಾಧನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿದೆ. ನಮ್ಮ ಸಂಪತ್ತು ಸರಿಯಾದ ವ್ಯಕ್ತಿಗಳಿಗೆ, ಸರಿಯಾದ ರೀತಿಯಲ್ಲಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಆ ಸಂಪತ್ತನ್ನು ನಿರ್ಮಿಸಲು ಸಹಾಯ ಮಾಡಿದ ಮೌಲ್ಯಗಳು ಮತ್ತು ಹಣಕಾಸಿನ ಶಿಸ್ತನ್ನೂ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದಾಗಿದೆ.
ನಮ್ಮ ಕುಟುಂಬದ ಭವಿಷ್ಯದ ಅಗತ್ಯಗಳಿಗಿಂತ ನಮ್ಮ ಸಂಪತ್ತು ಹೆಚ್ಚಾಗಿದ್ದರೆ, ಅದರ ಒಂದು ಭಾಗವನ್ನು ಸಮಾಜಮುಖಿ ಅಥವಾ ದತ್ತಿ ಕಾರ್ಯಗಳಿಗೆ ಮೀಸಲಿಡುವುದನ್ನೂ ನಾವು ಪರಿಗಣಿಸಬಹುದು. ಅದು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಪ್ರಾಣಿ ಕಲ್ಯಾಣ ಅಥವಾ ನಮ್ಮ ಮನಸ್ಸಿಗೆ ಹತ್ತಿರವಾದ ಯಾವುದೇ ಉದ್ದೇಶಕ್ಕೆ ಬೆಂಬಲ ನೀಡುವುದಾಗಿರಲಿ, ಇಂತಹ ಒಂದು ನಿರ್ಧಾರವು ನಾವು ಇಲ್ಲದ ನಂತರವೂ ನಮ್ಮ ಸಂಪತ್ತು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂತೆ ಮಾಡುತ್ತದೆ. ಅದಕ್ಕಿಂತ ಮುಖ್ಯವಾಗಿ, ಅದು ದಾನ ಮಾಡುವ ಮನೋಭಾವವನ್ನು ಜೀವಂತವಾಗಿರಿಸುತ್ತದೆ ಮತ್ತು ಮುಂದಿನ ತಲೆಮಾರುಗಳು ಸಮೃದ್ಧಿಯ ಜೊತೆಗೆ ಕರುಣೆಯ ಮೌಲ್ಯವನ್ನೂ ಅರ್ಥಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.
ಚೆನ್ನಾಗಿ ಬರೆಯಲ್ಪಟ್ಟ ಒಂದು ಉಯಿಲು ನಾವು ನಮ್ಮ ಪ್ರೀತಿಪಾತ್ರರಿಗೆ ಬಿಟ್ಟುಹೋಗಬಹುದಾದ ಅತ್ಯಂತ ಅಮೂಲ್ಯವಾದ ಉಡುಗೊರೆಗಳಲ್ಲಿ ಒಂದಾಗಿದೆ.
ಅದು ಯಾವುದೇ ಗದ್ದಲವಿಲ್ಲದೆ ಅವರಿಗೆ ಹೀಗೆ ಹೇಳುತ್ತದೆ: “ನಿಮಗಾಗಿ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾನು ಈಗಾಗಲೇ ಮಾಡಿದ್ದೇನೆ.”

Shreedhara is the Founder & Director of Ara Financial Services Pvt. Ltd. He has an experience of over 2 decades in Financial Service Industry with majority of it in guiding individuals and institutions on their investments requirements.



